ಹಿರಿಯರನ್ನು ಪ್ರೀತಿ, ಗೌರವದಿಂದ ಕಾಣಿರಿ : ಚರಂತಿಮಠ
ಅಂಬೇಡ್ಕರ ಭವನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ
ಬಾಗಲಕೋಟೆ: ಹಿರಿಯ ಜೀವಿಗಳನ್ನು ಪ್ರೀತಿ, ಗೌರದಿಂದ ಕಾಣುವ ಜೊತೆಗೆ ಸದಾ ಚಟುವಟಿಕೆಯಿಂದ ಇಡುವಂತೆ ನೋಡಿಕೊಳ್ಳಬೇಕೆಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆ, ಕ್ಷೇಮಾಭಿವೃದ್ದಿ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮನೆಯಲ್ಲಿ ಒಬ್ಬರು ಹಿರಿಯರಿದ್ದರೆ ಅವರ ಅನುಭವದ ಮಾತುಗಳು ಕೇಳುವದರ ಜೊತೆಗೆ ಅವುಗಳನ್ನು ಪಾಲಿಸುವುದು ಅಗತ್ಯವಾಗಿದೆ ಎಂದರು. ಜಿಲ್ಲೆಯ ವೆಂಕಪ್ಪ ಸುಗತೇಕರ ಅವರಿಗೆ ಹಿರಿಯ ನಾಗರಿಕರ ವಿಭಾಗದ ಜಾನಪದ ಕಲಾ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದು, ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆಯ ವಿಷಯವೆಂದರು.
ಹಿರಿಯ ನಾಗರಿಕರಿಗೆ ಸರಕಾರ ಸಂದ್ಯಾ ಸುರಕ್ಷಾ, ವೃದ್ದಾಪ್ಯ ವೇತನ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗವನ್ನು ಹಿರಿಯ ನಾಗರಿಕರು ಪಡೆದುಕೊಳ್ಳಬೇಕು. ನವನಗರದ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗಾಗಿಯೇ 10 ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡ ಪ್ರಾರಂಭಿಸಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು. ವಿಕಲಚೇತನರ ಸಮುದಾಯ ಭವನ ನಿರ್ಮಾಣ ಮಾಡಲಿಕ್ಕೆ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಿಂದ ಅರ್ದ ಎಕರೆ ಜಮೀನು ನೀಡಲಾಗುತ್ತಿದ್ದು, ಸುಸಜ್ಜಿತ ಕಟ್ಟಡವನ್ನು ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ ಹಿರಿಯ ನಾಗರಿಕರು ಸಮಾಜದಲ್ಲಿ ಗೌರವಕ್ಕೆ ಪ್ರತೀಕರಾದವರು. ಗೌರವಕ್ಕೆ ಶ್ರೇಷ್ಟರಾದವರು ತಂದೆ-ತಾಯಿಯರು. ಹತ್ತು ಪಂಡಿತಕ್ಕಿಂತ ಒಬ್ಬ ಆಚಾರ್ಯ ಶ್ರೇಷ್ಟ, ನೂರು ಆಚಾರ್ಯಕ್ಕಿಂತ ಒಬ್ಬ ತಂದೆ ಶ್ರೇಷ್ಟ ಹಾಗೂ ಸಾವಿರ ತಂದೆಕ್ಕಿಂತ ಒಬ್ಬ ತಾಯಿ ಶ್ರೇಷ್ಟ ಎಂದರು. ಹಿರಿಯ ಪಾಲನೆ ಪೋಷಣೆಯಲ್ಲಿ ಮಕ್ಕಳ ಕರ್ತವ್ಯದ ಜೊತೆಗೆ ಸಮಾಜದ ಕರ್ತವ್ಯವನ್ನು ಭಾರತದ ಪ್ರಧಾನ ಮಂತ್ರಿಗಳು ತೋರಿಸಿಕೊಟ್ಟಿದ್ದಾರೆ ಎಂದರು.
ಹಿರಿಯ ನಾಗರಿಕರಾದ ರಮೇಶ ತಳವಾರ, ಸಿದ್ದಪ್ಪ ಬಿದರಿ ತಮ್ಮ ಮನದಾಳದ ಮಾತನ್ನು ಆಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ನಾಗರಿಕರು, ಹಿರಿಯ ನಾಗರಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಂಸ್ಥೆ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಅಲ್ಲದೇ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕ್ರೀಡೆ ಹಾಗೂ ಸಾಂಸ್ಕøತಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ಜಿಲ್ಲಾ ಪಂಚಾಯತ ಸಹಾಯಕ ಯೋಜನಾಧಿಕಾರಿ ತಳವಾರ, ಹಿರಿಯ ನಾಗರಿಕರಾದ ಗೌರಮ್ಮ ಸಂಕೀನ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಜೀವ ಅಂಧ ಮಕ್ಕಳ ವಸತಿಯುತ ಶಾಲೆಯ ಮಕ್ಕಳು ಪ್ರಾರ್ಥನಾ ಗೀತೆ ಹಾಡಿದರು. ಎಂ.ಬಿ.ಮುದ್ನೂರ ವಂದಿಸಿದರು. ಸಂಗಮೇಶ ಸಣ್ಣತಂಗಿ ನಿರೂಪಿಸಿದರು.
ಹಿರಿಯ ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 19 ಹಿರಿಯ ನಾಗರಿಕರನ್ನು ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ 3 ಸಂಸ್ಥೆಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಚಂದ್ರಶೇಖರ ದಾಸರ, ಸುರೇಶ ವಸ್ತ್ರದ, ಚನ್ನಬಸಪ್ಪ ಅನವಾಲ, ಬಸವ್ವ ತೆಲಗಾಣಿ, ಸಿದ್ದಮ್ಮ ನಾಗೂರ, ಸಂಗಮೇಶ ಗುರವ, ಶಂಕರ ಹನಗಂಡಿ, ಬಸಮ್ಮ ಭಜಂತ್ರಿ, ಬಸವಣ್ಣೆಪ್ಪ ಕೊಳ್ಳಿ (ಸಮಾಜ ಸೇವೆ), ಷಡಕ್ಷರಿ ಖೋತ, ಆರ್.ಎನ್.ದಾದಿ, ಮಹಾದೇವ ಹೊಸಗೌಡರ (ಶಿಕ್ಷಣ ಕ್ಷೇತ್ರ), ಡಿ.ಎಲ್.ಪೈಲ್ (ಪ್ರಗತಿಪರ ಕ್ಷೇತ್ರ), ಪುಂಡಲೀಕಪ್ಪ ಮಾನುಟಗಿ (ಸಾಂಸ್ಕøತಿಕ ಕ್ಷೇತ್ರ), ಕೃಷ್ಣಪ್ಪ ಬೆಣ್ಣೂರ, ಶಾಂತಾ ಹನಗಂಡಿ, ಕಲ್ಲಪ್ಪ ತೇಲಿ, ಸಿದ್ದಪ್ಪ ಬಿದರಿ, ಯಮನವ್ವ ಮಾದರ (ಕಲಾಕ್ಷೇತ್ರ) ಹಾಗೂ ಸಿದ್ದಪ್ಪ ಬಿದರಿ (ಜಾನಪದ ಕವಿ). ಜಯಭಾರತ ಮಾತೆ ಗ್ರಾಮೀಣ ಅಭಿವೃದ್ದಿ ಸಂಸ್ಥೆ, ಕನಕದಾಸ ಸಂಸ್ಥೆ, ಮುನಿ ವೃದ್ದಾಶ್ರಮ (ಹಿರಿಯ ನಾಗರಿಕರ ಕ್ಷೇತ್ರ).


